ಡಿ.ವಿ.ಜಿ. ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು. ಡಿ ವಿ ಜಿ ಅವರು ಕೇವಲ ಸಾಹಿತಿಯಾಗಿರದೆ, ತತ್ವಶಾಸ್ತ್ರ ವಿದ್ವಾಂಸರು, ಕವಿ, ಮತ್ತು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು.
ಅವರು 1887 ಮಾರ್ಚ್ 17 ರಂದು ಕೋಲಾರ (kolar) ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ತಂದೆ ದೇವನಹಳ್ಳಿ ವೆಂಕಟರಮಣಯ್ಯ ಮತ್ತು ತಾಯಿ ಅಲಮೇಲು.
ಗುಂಡಪ್ಪನವರು 1898 ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದರು. ಆ ಸಂದರ್ಭದಲ್ಲೇ ಸಿಕ್ಕ ಇಂಗ್ಲಿಷ್ ಶಿಕ್ಷಣವನ್ನು ಪಡೆದರು, ಖಾಸಗಿಯಾಗಿ ಸಂಸ್ಕೃತವನ್ನು ಅಭ್ಯಾಸ ಮಾಡಿದರು. ಮುಂದೆ ಸಂಬಂಧಿಕರೊಬ್ಬರ ಸಹಾಯದಿಂದ ಮೈಸೂರಿನ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು, ಆದರೆ 1905 ರಲ್ಲಿ ಮೆಟ್ರಿಕ್ಯುಲೇಷನ್ ನಲ್ಲಿ ತೇರ್ಗಡೆಯಾಗಲಿಲ್ಲ, ಅಲ್ಲಿಗೆ ಶಾಲಾ ಶಿಕ್ಷಣವನ್ನು ನಿಲ್ಲಿಸಿದರು.
ಗುಂಡಪ್ಪನವರು ಪ್ರೌಢಶಾಲಾ ವ್ಯಾಸಂಗ ಮಾಡುತ್ತಿದ್ದಾಗಲೇ ವಿವಾಹವಾದರು; ಅವರ ಪತ್ನಿಯ ಹೆಸರು ಭಾಗೀರಥಮ್ಮ. ನಂತರ ಅವರು ಮುಳಬಾಗಿಲಿನ ಶಾಲೆಯೊಂದರಲ್ಲಿ ಅಧ್ಯಾಪಕರಾಗಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದರು, ಇದು ಅವರ ವೃತ್ತಿ ಬದುಕಿನ ಆರಂಭವಾಗಿತ್ತು. ಆದರೆ, ಆ ಕೆಲಸದಲ್ಲಿ ಹೆಚ್ಚು ಕಾಲ ಮುಂದುವರಿಯಲಾಗಲಿಲ್ಲ. ಅವರು ಆ ವೃತ್ತಿಯನ್ನು ತೊರೆದು ಕೋಲಾರದ ಚಿನ್ನದ ಗಣಿ ಮತ್ತು ಸೋಡಾ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸಿದರು, ತರುವಾಯ ಅವರು ಬೆಂಗಳೂರಿಗೆ ಆಗಮಿಸಿದರು.
ದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷಿನಲ್ಲಿ ಬರೆದ ಲೇಖನ ಡಿ.ವಿ.ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು ಪ್ರಕಟವಾಗುತ್ತಿದ್ದಂತೆ ಕೃತಿ ಪ್ರಕಟಣೆ ಮೂಲಕವೂ ಹಣ ಬರುವಂತಾಯಿತು. ಸಾಹಿತ್ಯ ಮಾತ್ರವಲ್ಲದೆ ಚರಿತ್ರೆ, ರಾಜನೀತಿ, ತತ್ವಜ್ಞಾನ, ಪ್ರಜಾಪ್ರಭುತ್ವ, ಸಮಾಜ ವಿಜ್ಞಾನ, ಸಾರ್ವಜನಿಕ ಜೀವನ, ಮುಂತಾದ ಹಲವಾರು ವಿಷಯಗಳನ್ನು ಕುರಿತು ಅವರು 66 ಕನ್ನಡ ಕೃತಿಗಳನ್ನು ರಚಿಸಿರುವುದರ ಜೊತೆಗೆ, ಇಂಗ್ಲಿಷ್ – ಕನ್ನಡ ಭಾಷೆಗಳೆರಡರಲ್ಲಿಯೂ ನೂರಾರು ಉಪಯುಕ್ತ ಲೇಖನಗಳನ್ನೂ ಬರೆದಿರುತ್ತಾರೆ.
ಕವಿತೆಗಳು : ನಿವೇದನ, ಉಮರನ ಒಸಗೆ, ಮಂಕುತಿಮ್ಮನ ಕಗ್ಗ – I, ಮರುಳ ಮುನಿಯನ ಕಗ್ಗ – II, ಶ್ರೀರಾಮ ಪರೀಕ್ಷಣಂ, ಅ೦ತಪುರಗೀತೆ.
ನಿಬಂಧ : ಜೀವನ ಸೌಂದರ್ಯ ಮತ್ತು ಸಾಹಿತ್ಯ, ಸಂಸ್ಕೃತಿ, ಬಾಳಿಗೊಂದು ನಂಬಿಕೆ , ಜೀವವನಧರ್ಮ ಯೋಗ.
ನಾಟಕ : ವಿದ್ಯಾರಣ್ಯ ವಿಜಯ, ಜಾಕ್ ಕೇಡ್.
ಡಿ.ವಿ.ಜಿ. ಅವರು 1935 ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಸಂಸ್ಥೆಯ ಸ್ಥಾಪನೆಯಲ್ಲಿ ಡಿ.ವಿ.ಜಿ. ಅವರ ಪಾತ್ರ ಪ್ರಮುಖವಾದದ್ದು, ಡಿ.ವಿ.ಜಿ. ಅವರು ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ ‘ಇಂಗ್ಲಿಷ್–ಕನ್ನಡ ನಿಘಂಟು’ ಕೃತಿಯ ಸಂಪಾದಕ ಸಮಿತಿಯಲ್ಲಿದ್ದರು. 1939ರಲ್ಲಿ ಮೈಸೂರು ರಾಜ್ಯಾಂಗ ಸುಧಾರಣಾ ಸಮಿತಿ ಸದಸ್ಯರಾಗಿದ್ದರು. ಡಿ.ವಿ.ಜಿ. ಅವರು 1939 ರಲ್ಲಿ ಮೈಸೂರು ರಾಜ್ಯಾಂಗ ಸುಧಾರಣಾ ಸಮಿತಿಯ ಸದಸ್ಯತ್ವವನ್ನು ಹೊಂದಿದ್ದರು.
ಡಿ.ವಿ. ಗುಂಡಪ್ಪನವರು ತಮ್ಮ ಜೀವಿತಾವಧಿಯಲ್ಲಿ ಹಲವಾರು ಮಹತ್ವದ ಗೌರವಗಳು ಮತ್ತು ಪ್ರಶಸ್ತಿಗಳನ್ನು ಪಡೆದರು. ಅವುಗಳಲ್ಲಿ 1932 ರಲ್ಲಿ ಮಡಿಕೇರಿಯಲ್ಲಿ ನಡೆದ 18ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಿ.ವಿ.ಜಿ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮ ನಾಯಕತ್ವವನ್ನು ನೀಡಿದರು. ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಡಿ.ವಿ.ಜಿ ಅವರ ಅಪಾರ ಕೊಡುಗೆಯನ್ನು ಗುರುತಿಸಿ, 1961 ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು.
ಅವರ ಶ್ರೇಷ್ಠ ಕೃತಿ “ಶ್ರೀಮದ್ಭಗವದ್ಗೀತಾ ತಾತ್ಪರ್ಯ” ಕ್ಕೆ 1967 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಈ ಪ್ರಶಸ್ತಿಯು ಅವರ ವಿದ್ವತ್ಪೂರ್ಣ ಬರಹಕ್ಕೆ ಸಂದ ಗೌರವವಾಗಿತ್ತು.
1973 ರಲ್ಲಿ ಡಿ.ವಿ.ಜಿ ಅವರನ್ನು ಸನ್ಮಾನಿಸಲು ರಚಿಸಲಾದ ಸಮಿತಿಯು ಅವರಿಗೆ ಒಂದು ಲಕ್ಷ ರೂಪಾಯಿಗಳ ಗೌರವಧನವನ್ನು ನೀಡಿತು. ವಿಶೇಷವೆಂದರೆ, ಡಿ.ವಿ.ಜಿ ಅವರು ಈ ಹಣವನ್ನು ತಾವೇ ಸ್ಥಾಪಿಸಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಗೆ ದಾನ ಮಾಡಿದರು.
ಭಾರತ ಸರ್ಕಾರವು 1974 ರಲ್ಲಿ ಡಿ.ವಿ.ಜಿ ಅವರ ಸಾಹಿತ್ಯ ಮತ್ತು ಸಾರ್ವಜನಿಕ ಸೇವೆಗಳನ್ನು ಪರಿಗಣಿಸಿ ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ “ಪದ್ಮಭೂಷಣ” ವನ್ನು ನೀಡಿ ಗೌರವಿಸಿತು.
ಡಿ.ವಿ.ಜಿ ಅವರ ನೆನಪನ್ನು ಚಿರಸ್ಥಾಯಿಗೊಳಿಸಲು ಭಾರತೀಯ ಅಂಚೆ ಸೇವೆಯು 1988 ರಲ್ಲಿ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.
ಈ ಗೌರವಗಳು ಮತ್ತು ಪುರಸ್ಕಾರಗಳು ಡಿ.ವಿ.ಗುಂಡಪ್ಪನವರು ಕನ್ನಡ ಸಾಹಿತ್ಯ ಮತ್ತು ಸಮಾಜಕ್ಕೆ ನೀಡಿದ ಅನನ್ಯ ಕೊಡುಗೆಗಳಿಗೆ ಸಾಕ್ಷಿಯಾಗಿವೆ.
ಜೀವನದಲ್ಲಿ ತೊಂದರೆಗಳಿದ್ದರೂ ಅವರಲ್ಲಿ ಹಾಸ್ಯ ಪ್ರವೃತ್ತಿ ಸಾಕಷ್ಟು ಇತ್ತು. ಅವರು ವ್ಯಾಕರಣ ಕಲಿಯಲು ಗರಣಿಕೃಷ್ಣಾಚಾರ್ಯರಲ್ಲಿ ಹೋದಾಗ ಅವರಿಗೆ ಶಬ್ದಶಾಸ್ತ್ರ ಒಲಿಯದೆ ಸೂಪಶಾಸ್ತ್ರದಲ್ಲಿ ಪರಿಣತಿ ಪಡೆದುದಾಗಿ ಒಂದು ಹಾಸ್ಯ ಭರಿತ ಸಂಸ್ಕೃತ ಶ್ಲೋಕದಲ್ಲಿ ಹೇಳುತ್ತಾರೆ. ಅದೇನೆಂದರೆ – “ನಾವು ವೇದಂತದಲ್ಲಿ ನುರಿತವರಲ್ಲ, ವ್ಯಾಕರಣವನ್ನೂ ಅರಿತವರಲ್ಲ, ತರ್ಕವೇದಗಳನ್ನೂ ತಿಳಿದವರಲ್ಲ, ಸಾಹಿತ್ಯದಲ್ಲಿ ಸರಸತೆಇಲ್ಲ, ಆದರೆ ಕೇವಲ ಶ್ರೀಮದ್ ಬೇಳೇಹುಳಿ, ಪಳದ್ಯ, ಕೋಸಂಬರಿ, ತೊವ್ವೆ, ಹಯಗ್ರೀವ, ಅಂಬೊಡೆ, ಕರಿಗಡಬು ಮತ್ತು ಮೊಸರನ್ನದಲ್ಲಿ ರಸಿಕರು.”
1975 ರ ಅಕ್ಟೋಬರ್ 7 ರಂದು ಡಿ ವಿ ಜಿ.ಯವರು ನಿಧನರಾದರು. 2003 ರಲ್ಲಿ ಬೆಂಗಳೂರಿನ ಬಸವನಗುಡಿ ಬ್ಯೂಗಲ್ ರಾಕ್ ಪಾರ್ಕಿನಲ್ಲಿ ಡಿವಿಜಿಯವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.