Channaveer Kanavi – ಕನ್ನಡದ ಒಬ್ಬ ಅದ್ಭುತ ಕನ್ನಡದ ಪ್ರಸಿದ್ಧ ಕವಿ, ಲೇಖಕ ಮತ್ತು ಚಿಂತಕರಾಗಿದ್ದರು ಅಲ್ಲದೆ ಸುನೀತಗಳ ಸಾಮ್ರಾಟ ಎಂದು ಖ್ಯಾತರಾಗಿರುವ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದಾರೆ. ಇವರ ಕಾವ್ಯಗಳಲ್ಲಿ ಸಮಾಜದ ನೈತಿಕತೆ, ಮಾನವೀಯ ಮೌಲ್ಯಗಳು ಮತ್ತು ಭಾವನಾತ್ಮಕ ವಿಚಾರಗಳನ್ನು ಸ್ಪಷ್ಟವಾಗಿ ನೋಡಬಹುದು.
ಚನ್ನವೀರ ಕಣವಿಯವರು ಗದಗ (Gadag) ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28 ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ, ಇವರ ತಂದೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು.
ಧಾರವಾಡದಲ್ಲಿ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಮುಗಿಸಿ 1952ರಲ್ಲಿ ಕರ್ನಾಟಕ (Karnataka) ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು. 1956ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು, ಇವರ ಪತ್ನಿಯಾದ ಶಾಂತಾದೇವಿ ಯವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರು.
ಚನ್ನವೀರ ಕಣವಿಯವರು ವಿಮರ್ಶೆಗಳನ್ನು ಬರೆದಿದ್ದರು ಕೂಡ, ಅವರು ಪ್ರಸಿದ್ಧರಾಗಿದ್ದು ಕವಿಯಾಗಿ, ಅವರು ನವೋದಯ ಕಾಲಘಟ್ಟದ ‘ನಡುಹಗಲ’ ಹಂತದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದರು. ಈ ಸಮಯದಲ್ಲಿ ಬೇಂದ್ರೆ, ಕುವೆಂಪು, ಪು.ತಿ.ನ, ಮಧುರಚೆನ್ನ ಮುಂತಾದ ಗಣ್ಯ ಕವಿಗಳ ಕೃತಿಗಳು ಯುವ ಕವಿಗಳ ಮೇಲೆ ತೀವ್ರ ಪ್ರಭಾವ ಬೀರುತ್ತಿದ್ದ ಸಮಯವದು.
ಕಣವಿ ಅವರ ಆರಂಭಿಕ ಕವಿತೆಗಳಲ್ಲೂ ಈ ರೀತಿಯ ಪ್ರಭಾವಗಳ ಛಾಯೆಗಳನ್ನು ನೋಡಬಹುದು, ಅವರ ಕಾವ್ಯಗಳಲ್ಲಿ ರಮ್ಯ ಮನಸ್ಥಿತಿ, ಆದರ್ಶಗಳ ಪಾಲನೆ ಹಾಗೂ ವ್ಯಕ್ತಿತ್ವದ ಬೆಳವಣಿಗೆಗಾಗಿ ತೀವ್ರವಾದ ಹಂಬಲಗಳು ಸ್ಪಷ್ಟವಾಗಿ ವ್ಯಕ್ತವಾಗುತ್ತವೆ. ಈ ಅಂಶಗಳು 1949ರಲ್ಲಿ ಪ್ರಕಟವಾದ ‘ಕಾವ್ಯಾಕ್ಷಿ’ ಹಾಗೂ 1950ರಲ್ಲಿ ಪ್ರಕಟವಾದ ‘ಭಾವಜೀವಿ’ ಕವನ ಸಂಕಲನಗಳಲ್ಲಿ ವಿಶೇಷವಾಗಿ ಮೂಡಿಬಂದಿವೆ.
ಸಾನೆಟ್ ನ (Sonnet) ಕಾವ್ಯಬಂಧ ಕಣವಿ ಅವರಿಗೆ ಇಷ್ಟವಾದದ್ದು. ‘ಕಾವ್ಯರಚನೆಯ ಪ್ರಾರಂಭದಿಂದಲೂ ನನ್ನ ಮನಸ್ಸನ್ನಾಕರ್ಷಿಸಿದ ಕಾವ್ಯ ಪ್ರಕಾರ ಸಾನೆಟ್’ ಎಂದು ‘ಎರಡು ದಡ’ದ ಮುನ್ನುಡಿಯಲ್ಲಿ ಸ್ವತಃ ಕಣವಿ ಅವರೆ ಹೇಳಿಕೊಂಡಿದ್ದಾರೆ. “ಕಣವಿಯವರು ತಮ್ಮ ತತ್ವಜ್ಞಾನವೆಲ್ಲಾ, ಜೀವನದ ಮೇಲಿದ್ದ ತಮ್ಮ ಭರವಸೆಯನ್ನೆಲ್ಲಾ ಈ ಸುನೀತದಲ್ಲಿ ಅತ್ಯಂತ ಪ್ರಭಾವಿಯಾಗಿ ಹೆಣೆದಿದ್ದಾರೆ.”
ಅಷ್ಟು ಸುಲಭವಲ್ಲದ ಕಾವ್ಯಬಂಧವನ್ನು ಅಪ್ಪಿಕೊಂಡ ಕಣವಿಯವರು ಚೆಂದದ ಅನೇಕ ಸುನೀತಗಳನ್ನು ರಚಿಸಿದ್ದಾರೆ. ಈ ಮೂಲಕ ಕವಿ ತಮ್ಮ ಸುನೀತಗಳ ಮುಖಾಂತರ ಕನ್ನಡಕ್ಕೆ ಮಹತ್ವದ ಕಾವ್ಯಸಂಪತ್ತನ್ನು ನೀಡಿದ್ದಾರೆಂದು ನಿಸ್ಸಂದೇಹವಾಗಿ ಹೇಳಬಹುದು. ಶಾಂತಿನಾಥ ದೇಸಾಯಿ ಅವರು ಉಲ್ಲೇಖಿಸಿ ರುವ ಹಾಗೆ “ಸ್ವಾತಂತ್ರ್ಯ ಸಂಗ್ರಾಮದಂಥ ಸಾರ್ವಜನಿಕ ವಿಷಯದ ಮೇಲೆ ಬರೆಯುವ ಪ್ರಸಂಗ ಬಂದಾಗಲಾಗಲಿ, ಗಾಂಧಿ, ಶಾಸ್ತ್ರಿ, ಶ್ರೀ ಅರವಿಂದರಂತಹ ಮಹಾತ್ಮರ ಬಗ್ಗೆ ಬರೆಯಬೇಕಾದ ಸಂದರ್ಭದಲ್ಲಾಗಲಿ ಇನ್ನೂ ಹತ್ತಿರದ ಹಿರಿಯರಾದ ಬೇಂದ್ರೆ, ಮುಗಳಿ, ತೀ.ನಂ.ಶ್ರೀ ಮುಂತಾದ ಆತ್ಮೀಯರ ಬಗ್ಗೆ ಬರೆಯುವ ಪ್ರಸಂಗ ಬಂದಾಗಲಾಗಲಿ ಕಣವಿಯವರಿಗೆ ಸಾನೆಟ್ ಒಂದು ಅತ್ಯಂತ ಆಕರ್ಷಕ ವ್ಯಕ್ತಪಡಿಸುವ ಸಾಧನವಾಯಿತು. ಇವರು ಹಲವಾರು ಕಾವ್ಯಸಂಕಲನಗಳನ್ನ ರಚಿಸಿದ್ದಾರೆ, ಅವುಗಳಲ್ಲಿ- ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ಮಣ್ಣಿನ ಮೆರವಣಿಗೆ, ದಾರಿ ದೀಪ, ನೆಲ ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ ಇತ್ಯಾದಿ.
ಚನ್ನವೀರ ಕಣವಿಯವರ ಸಾಹಿತ್ಯ ಸಾಧನೆಗೆ ಹಲವು ಪ್ರಮುಖ ಪ್ರಶಸ್ತಿಗಳು ದೊರೆತಿವೆ. ಇವರ “ಜೀವಧ್ವನಿ” ಎಂಬ ಕವನ ಸಂಕಲನಕ್ಕೆ 1981ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಕೃತಿ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಇದು ಮಾತ್ರವಲ್ಲದೆ, ಅವರು 1996ರಲ್ಲಿ ಹಾಸನದಲ್ಲಿ ನಡೆದ 56ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅವರ ಸಾಹಿತ್ಯದ ಸೇವೆಗೆ ಕೊಟ್ಟ ಗೌರವಗಳು:
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಜೀವಧ್ವನಿ ಕವನ ಸಂಗ್ರಹಕ್ಕೆ)
ರಾಜ್ಯೋತ್ಸವ ಪ್ರಶಸ್ತಿ
ಪಂಪ ಪ್ರಶಸ್ತಿ
ಬಸವಗುರು ಕಾರುಣ್ಯ ಪ್ರಶಸ್ತಿ
ನಾಡೋಜ ಪ್ರಶಸ್ತಿ
ಕರ್ನಾಟಕ ಕವಿರತ್ನ ಪ್ರಶಸ್ತಿ
ಅನಕೃ ನಿರ್ಮಾಣ ಪ್ರಶಸ್ತಿ
ಹಾಗೂ ಇತರ ಹಲವು ಗೌರವ ಮತ್ತು ಪುರಸ್ಕಾರಗಳು ಅವರನ್ನು ಹುಡುಕಿ ಬಂದವು.
ಕಣವಿ ಅವರು 16 ಫೆಬ್ರವರಿ 2022 ರಂದು 93 ನೇ ವಯಸ್ಸಿನಲ್ಲಿ SDM ಕಾಲೇಜ್ ಆಫ್ ಮೆಡಿಕಲ್ನಲ್ಲಿ ಮಲ್ಟಿಪಲ್ ಆರ್ಗನ್ ಡಿಸ್ಫಂಕ್ಷನ್ ಸಿಂಡ್ರೋಮ್ನಿಂದ ನಿಧನರಾದರು.
ಚನ್ನವೀರ ಕಣವಿ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಳು ಅಮೂಲ್ಯವಾದವು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಮೆರುಗು ಮೂಡಿಸಿದ ಅವರಸಾಹಿತ್ಯ ಮತ್ತು ಮಾರ್ಗದರ್ಶನದ ಮೂಲಕ ಹೊಸ ತಲೆಮಾರಿಗೆ ಸ್ಪೂರ್ತಿಯಾದರು. “ಜೀವಧ್ವನಿ”ಯಂತಹ ಕೃತಿಗಳ ಮೂಲಕ ಬದುಕಿನ ತಾತ್ವಿಕ ನುಡಿಗಳನ್ನು ಹೃದಯ ಸ್ಪರ್ಶಿಸುವಂತೆ ಹೇಳಿದರು. ಅವರ ಶಿಸ್ತು, ನಿಷ್ಠೆ ಮತ್ತು ಸರಳ ಬದುಕು ಬರಹಗಳಲ್ಲಿ ಓದುಗರ ಹೃದಯ ಗೆದ್ದಿತ್ತು. ಕಣವಿಯವರು ಕನ್ನಡ ಭಾಷೆಯ ಔಜಸ್ಸು ಮತ್ತು ಸಂಸ್ಕೃತಿಯ ಪ್ರೀತಿಯಿಂದ ನಿರ್ಮಿತವಾದ ಒಂದು ಶ್ರೇಷ್ಠ ವ್ಯಕ್ತಿತ್ವ. ಅವರು ಬರೆದ ಪದಗಳು ಈಗಲೂ ಪಾಠವಾಗುತ್ತಿವೆ, ಮತ್ತು ಕನ್ನಡದ ಆಧುನಿಕ ಕಾವ್ಯ ಚರಿತ್ರೆಯಲ್ಲಿ ಅವರ ಹೆಸರು ಸದಾ ಇರುತ್ತದೆ.