ಸಂತ ಶಿಶುನಾಳ ಶರೀಫರು

 

ಸಂತ ಶಿಶುನಾಳ ಶರೀಫ

 

ಪೀಠಿಕೆ 

ಸಂತ ಶಿಶುನಾಳ ಶರೀಫರು (Saint Shishunala Sharif) “ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ” ತತ್ವಪದಗಳ ಮೂಲಕ ಸಮಾಜ ಸುಧಾರಣೆ ಮಾಡಿದ  ಸಂತ ಶಿಶುನಾಳ ಶರೀಫರು ಒಬ್ಬ  ಭಾರತೀಯ ಸಮಾಜ ಸುಧಾರಕ, ತತ್ವಜ್ಞಾನಿ ಮತ್ತು ಕವಿ. (the poet) ಶಿಶುನಾಳ ಶರೀಫರು ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳ ಸಮ್ಮಿಲನಕ್ಕೆ ಹೆಸರಾದವರು. ಅವರ ತತ್ವಪದಗಳು ಮಾನವೀಯ ಮೌಲ್ಯಗಳು, ಭಕ್ತಿ, ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಆಳವಾದ ಒಳನೋಟಗಳನ್ನು ನೀಡುತ್ತವೆ.

 

ಜನನ

ಇವರು 7 ಮಾರ್ಚ್ 1819 ರಂದು ಕರ್ನಾಟಕದ ಹಾವೇರಿ (Haveri) ಜಿಲ್ಲೆಯಲ್ಲಿರುವ ಶಿಗ್ಗಾಂವಿ ತಾಲ್ಲೂಕಿನ ಶಿಶುವಿನಹಾಳ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ – ಇಮಾಮ್ ಸಾಹೇಬ್, ತಾಯಿ – ಹುಜ್ಜಮಾ 

ಶಿಶುನಾಳ ಶರೀಫರು ಹಜರೇಶ ಖಾದ್ರಿ ಎಂಬ ಗುರುಗಳ ಶಿಷ್ಯರಾಗಿದ್ದರು. ಖಾದ್ರಿಯವರು ಹಿಂದೂ ಮತ್ತು ಮುಸ್ಲಿಂ ಧರ್ಮಗಳನ್ನು ಒಂದುಗೂಡಿಸುವ ಆಸೆ ಹೊಂದಿದ್ದರು. ಖಾದ್ರಿಯವರು ಲಿಂಗಾಯತ ಸಂಪ್ರದಾಯದಂತೆ ಶರೀಫರಿಗೆ ‘ಲಿಂಗ ದೀಕ್ಷೆ’ ನೀಡಿದರು. ಶರೀಫರ ತಂದೆ ಅವರಿಗೆ ರಾಮಾಯಣ, ಮಹಾಭಾರತ ಮತ್ತು ಅಲ್ಲಮ ಪ್ರಭುವಿನ ಬೋಧನೆಗಳನ್ನು ಕಲಿಸಿದರು. ಶರೀಫರು ಬಸವಣ್ಣನವರ ಆಶೀರ್ವಾದದಿಂದ ಜನಿಸಿದರು ಎಂಬ ನಂಬಿಕೆ ಇದೆ.

 

ಗೋವಿಂದ ಭಟ್ಟರ ಭೇಟಿ 

ಗೋವಿಂದ ಭಟ್ಟರು ಜಾತಿ, ಧರ್ಮ ನೋಡದೆ ಎಲ್ಲರೊಡನೆ ಬೆರೆಯುತ್ತಿದ್ದರು. ಜಾತಿ ಅಥವಾ ಧರ್ಮ ಎಂಬ ಬೇಧ ಭಾವ ಮಾಡದೇ  ಯಾರು ಆಹ್ವಾನಿಸಿದರೂ ಅವರ ಮನೆಗೆ ಹೋಗಿ ಪ್ರಸಾದ ತಿನ್ನುತ್ತಿದ್ದರು. ಇದು ಸಾಂಪ್ರದಾಯಿಕ ಬ್ರಾಹ್ಮಣರಿಗೆ ಇಷ್ಟವಾಗುತ್ತಿರಲಿಲ್ಲ.

ಶರೀಫರು ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಕೆಲವು ಕಾಲ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು. ನಂತರ ಅವರಿಗೆ ಕಳಸದ ಗುರು ಗೋವಿಂದಭಟ್ಟರ ಆಶೀರ್ವಾದ ದೊರೆಯಿತು. ಗೋವಿಂದಭಟ್ಟರು, ಬ್ರಾಹ್ಮಣರಾಗಿದ್ದರೂ, ಆ ಕಾಲದಲ್ಲಿ ಸಾಂಪ್ರದಾಯಿಕವಲ್ಲದ ಶಿಕ್ಷಕರಾಗಿ ಹೆಸರುವಾಸಿಯಾಗಿದ್ದರು. ಯಾವುದೇ ಧರ್ಮದ ಬಗ್ಗೆ ಮೂಢನಂಬಿಕೆ ಹೊಂದಿರದ ಅವರ ವಿಚಾರಧಾರೆಗಳು ಶರೀಫರನ್ನು ಆಕರ್ಷಿಸಿದವು. ನಂತರ ಶರೀಫರು ಗೋವಿಂದಭಟ್ಟರ ಶಿಷ್ಯರಾದರು.

ಗೋವಿಂದ ಭಟ್ಟರು ಒಂದು ದಿನ ಶಿಶುವಿನಹಾಳಕ್ಕೆ ಬಂದಾಗ, ಶರೀಫನ ತಂದೆ ತಮ್ಮ ಮಗನನ್ನು ಅವರ ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ಕೇಳಿಕೊಂಡರು. ಗೋವಿಂದ ಭಟ್ಟರು ಶರೀಫನನ್ನು ಕರೆದು, “ನಿನ್ನ ತಂದೆ ಯಾರು?” ಎಂದು ಕೇಳಿದರು. ಗ್ರಾಮಸ್ಥರು ನಕ್ಕರು. ಆದರೆ ಶರೀಫನು, “ನೀವು ಯಾವ ರೀತಿಯ ಪ್ರಶ್ನೆ ಕೇಳುತ್ತಿದ್ದೀರಿ? ನಿನ್ನ ತಂದೆ ಮತ್ತು ನನ್ನ ತಂದೆ ಒಂದೇ!” ಎಂದು ಧೈರ್ಯದಿಂದ ಉತ್ತರಿಸಿದಾಗ, ಎಲ್ಲರೂ ಆಶ್ಚರ್ಯಚಕಿತರಾದರು.  ಗೋವಿಂದ ಭಟ್ಟರು ನಕ್ಕು, ಶರೀಫನ ಬೆನ್ನು ತಟ್ಟಿ, “ಅದ್ಭುತ, ಶರೀಫ! ಈ ಭೂಮಿ ಫಲವತ್ತಾಗಿದೆ, ಬೀಜ ಚೆನ್ನಾಗಿ ಮೊಳಕೆಯೊಡೆಯುತ್ತದೆ. ಓ ಇಮಾಮ್, ಅವನನ್ನು ನನ್ನ ಆರೈಕೆಗೆ ಬಿಡಿ! ಇಂದಿನಿಂದ, ಅವನು ನನ್ನ ಮಗ!” ಎಂದರು.

ತತ್ವಪದಗಳು 

ಶಿಶುನಾಳ ಶರೀಫರು ಧಾರವಾಡ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿ ಹಾಡುಗಳನ್ನು ರಚಿಸಿದ್ದಾರೆ. ಅವರ ಹಾಡುಗಳು ದೇವತಾಸ್ತುತಿ ಮತ್ತು ತತ್ವಬೋಧನೆ ಎರಡನ್ನೂ ಒಳಗೊಂಡಿವೆ, ಅವರ ಹೆಚ್ಚಿನ ಹಾಡುಗಳು ಕನ್ನಡದಲ್ಲಿದ್ದರೂ, ಕೆಲವು ಉರ್ದು ಭಾಷೆಯಲ್ಲೂ ಇವೆ.  ಚಾಮರಸನ ‘ಪ್ರಭುಲಿಂಗಲೀಲೆ’ ಕೃತಿಯು ಅವರ ಮೇಲೆ ಆಳವಾದ ಪ್ರಭಾವ ಬೀರಿದೆ.

ಭಕ್ತಿಯಿಂದ ಜ್ಞಾನ, ಜ್ಞಾನದಿಂದ ವಿರಕ್ತಿ, ವಿರಕ್ತಿಯಿಂದ ಮುಕ್ತಿ ಎಂಬ ತತ್ವವನ್ನು ಅವರು ಪ್ರತಿಪಾದಿಸಿದ್ದಾರೆ.  ಅವರು ತಮ್ಮ ಹಾಡುಗಳಿಗೆ ‘ಶಿಶುನಾಳಧೀಶ’ ಎಂಬ ಅಂಕಿತವನ್ನು ಬಳಸಿದ್ದಾರೆ. ‘ಲೋಕದ ಕಾಳಜಿ’, ‘ಗುಡಿಯ ನೋಡಿರಣ್ಣ’, ‘ಅಳಬೇಡ ತಂಗಿ ಅಳಬೇಡ’, ‘ಕೋಡಗನ ಕೋಳಿ ನುಂಗಿತ್ತಾ’, ‘ತರವಲ್ಲ ತಗಿ ನಿನ್ನ ತಂಬೂರಿ ಸ್ವರ’ ಮುಂತಾದ ಜನಪ್ರಿಯ ತತ್ವಪದಗಳನ್ನು ಅವರು ರಚಿಸಿದ್ದಾರೆ. ಶಿಶುನಾಳ ಶರೀಫರು ೪೦೦ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ಅವರ ಕೆಲವು ಪ್ರಸಿದ್ಧ ಹಾಡುಗಳೆಂದರೆ, “ಬಿದ್ದೀಯಬ್ಬೆ ಮುದುಕಿ”, “ಅಳಬೇಡ ತಂಗಿ ಅಳಬೇಡ” ಇತ್ಯಾದಿ. ಅವರು ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳ ಸಾರವನ್ನು ತಮ್ಮ ಹಾಡುಗಳಲ್ಲಿ ಅಳವಡಿಸಿದ್ದಾರೆ. ಶಿಶುನಾಳ ಶರೀಫರು ಭಾವೈಕ್ಯತೆಯ ಸಂಕೇತವಾಗಿದ್ದರು. ಅವರು ಎಲ್ಲಾ ಧರ್ಮಗಳ ಸಾರವನ್ನು ತಮ್ಮ ಹಾಡುಗಳಲ್ಲಿ ಹೇಳಿದ್ದಾರೆ.

 

ಮರಣ 

70 ವರ್ಷಗಳ ಕಾಲ ಬದುಕಿ ಹುಟ್ಟಿದ ದಿನದಂದೇ (1889 March 7) ಎಲ್ಲರಿಗೂ ಹೇಳಿ ಕೇಳಿ, ಬಿಡತೇನಿ ದೇಹ ಬಿಡತೇನಿ ಎಂದು ಹಾಡುತ್ತ ವಿದೇಹ ಕೈವಲ್ಯವನ್ನು ಪಡೆದು ಶಿಶುನಾಳಧೀಶನಲ್ಲಿ ಒಂದಾದರು.   

 

ಉಪಸಂಹಾರ 

ಹೀಗೆ  ಉತ್ತರಕರ್ನಾಟಕವು ಅನೇಕ ಸಂತರನ್ನು ಪಡೆದ ಪುಣ್ಯಕ್ಷೇತ್ರ. ಹುಬ್ಬಳ್ಳಿಯ ಸಿದ್ಧಾರೂಢರು, ನವಲಗುಂದದ ನಾಗಲಿಂಗಜ್ಜ, ಅಥಣಿಯ ಮುರುಘೇಂದ್ರರು, ಅಗಡಿ ಶೇಷಾಚಲಸ್ವಾಮಿಗಳು, ತಿಂಥಿಣಿ ಮೋನೇಶ್ವರರು, ಕಡಕೋಳ ಮಡಿವಾಳಪ್ಪ ಮುಂತಾದವರು ಜನಮಾನಸದಲ್ಲಿ ಬೆರೆತು ಹೋಗಿದ್ದಾರೆ. ಜಾತಿ, ಧರ್ಮಗಳನ್ನು ಬದಿಗೊತ್ತಿ ಸಹೋದರತ್ವ ವನ್ನು ಎತ್ತಿ ಹಿಡಿದಿದ್ದಾರೆ. ಅಲ್ಲಮಪ್ರಭು ಹೇಳಿದ ‘ತನ್ನ ತಾನರಿದಡೆ ತನ್ನರಿವೆ ಗುರು’ ಎಂಬ ಮಹಾಸೂತ್ರವನ್ನು ಇಲ್ಲಿಯ ನೂರಾರು ಸಂತರು ಬಿಡದೆ ಪಾಲಿಸಿದ್ದಾರೆ.

 

    Leave A Comment

    Top