ಭಾರತ ದೇಶದ ರಾಷ್ಟ್ರಧ್ವಜವನ್ನು (National flag of India) ತಯಾರು ಮಾಡುವ ಏಕೈಕ ಸ್ಥಳ ಅಂದ್ರೆ ಅದು ನಮ್ಮ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (Karnataka Khadi Village Industries Association) (KKGSS) ಧಾರವಾಡ ನಗರದ ಬಳಿಯ ಗರಗ ಗ್ರಾಮದಲ್ಲಿ ನೆಲೆಗೊಂಡಿರುವ ಒಂದು ಉತ್ಪಾದನಾ ಒಕ್ಕೂಟವಾಗಿದೆ, ಅಲ್ಲದೆ ಭಾರತದ ಕರ್ನಾಟಕದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಬೆಂಗೇರಿಯಲ್ಲಿ ಇದರ ಪ್ರಧಾನ ಕಚೇರಿ ಇದೆ.
ಈ ಘಟಕವು ಭಾರತೀಯ ಮಾನದಂಡಗಳ ಬ್ಯೂರೋ (BIS) ಮಾನ್ಯತೆ ಪಡೆದ ಏಕೈಕ ರಾಷ್ಟ್ರೀಯ ಧ್ವಜ ಉತ್ಪಾದನಾ ಘಟಕವಾಗಿದೆ.
ಈ ಘಟಕದಲ್ಲಿ ಧ್ವಜದ ತಯಾರಿಕೆಯ ಪ್ರಕ್ರಿಯೆಯಲ್ಲಿ ಬರುವಂತಹ ಕತ್ತರಿಸುವುದು, ಹೊಲಿಯುವುದು, ಮುದ್ರಿಸುವುದು ಮತ್ತು ವಿನ್ಯಾಸಗೊಳಿಸುವುದನ್ನು ಹೊಂದಿರುತ್ತದೆ, ವಿಶೇಷವೆಂದರೆ ಇಲ್ಲಿನ ಹೆಚ್ಚಿನ ಕೆಲಸವನ್ನು ಮಹಿಳೆಯರೇ ಮಾಡುತ್ತಾರೆ.
ಖಾದಿ ಮತ್ತು ಇತರ ಗ್ರಾಮೀಣ ಕೈಗಾರಿಕೆಗಳ ಬೆಳವಣಿಗೆಯ ಅಗತ್ಯವನ್ನು ಪೂರೈಸುವ ಒಕ್ಕೂಟವನ್ನು ರಚಿಸುವ ಗುರಿಯೊಂದಿಗೆ KKGSS ಅನ್ನು ನವೆಂಬರ್ 1, 1957 ರಂದು ಸ್ಥಾಪನೆ ಮಾಡಲಾಯಿತು.
ಈ ಪ್ರದೇಶದ ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು ಇದರ ಮತ್ತೊಂದು ಮುಖ್ಯ ಉದ್ದೇಶವಾಗಿತ್ತು. ರಾಜ್ಯದಾದ್ಯಂತ ಸುಮಾರು 58 ಸಂಸ್ಥೆಗಳನ್ನು ಈ ಒಕ್ಕೂಟದ ನೆಲೆಯಲ್ಲಿ ತರಲಾಯಿತು. ಪ್ರಧಾನ ಕಚೇರಿ ಹುಬ್ಬಳ್ಳಿಯಲ್ಲಿದೆ ಮತ್ತು 17 ಎಕರೆ ಭೂಮಿಯಲ್ಲಿ ಹರಡಿದೆ.
ಖಾದಿ ಉತ್ಪಾದನೆಯು 1982 ರಲ್ಲಿ ಆರಂಭವಾಯಿತು, ಜವಳಿ ರಸಾಯನಶಾಸ್ತ್ರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ತರಬೇತಿ ಕಾಲೇಜನ್ನು ಸಹ ಈ ಸಂಸ್ಥೆ ನಡೆಸುತ್ತಿದೆ. ಬಟ್ಟೆಗಳ ಗುಣಮಟ್ಟವನ್ನು ಸುಧಾರಿಸುವಂತಹ ತಂತ್ರಜ್ಞರನ್ನು ಹೊರತರುವುದು ಈ ಕಾಲೇಜಿನ ಉದ್ದೇಶವಾಗಿದೆ.
ರಾಷ್ಟ್ರಧ್ವಜವನ್ನು KKGSS ನ ಖಾದಿ ಘಟಕವು ತಯಾರು ಮಾಡುತ್ತದೆ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಇಡೀ ದೇಶಕ್ಕೆ ಭಾರತೀಯ ಧ್ವಜದ ತಯಾರಕರು ಮತ್ತು ಪೂರೈಕೆದಾರರಲ್ಲಿ ಒಂದು ಎಂದು ಪ್ರಮಾಣೀಕರಿಸಿದೆ. ಧ್ವಜ ತಯಾರಿಕೆಯಲ್ಲಿ 100 ತಜ್ಞ ನೂಲುವವರು ಮತ್ತು 100 ನೇಕಾರರು ಕೆಲಸ ಮಾಡುತ್ತಿದ್ದಾರೆ, ಧ್ವಜಕ್ಕೆ ಅಗತ್ಯವಿರುವ ಬಟ್ಟೆಯನ್ನು ಬಾಗಲಕೋಟೆಯಲ್ಲಿರುವ ಖಾದಿ ಘಟಕದಿಂದ ಪಡೆಯಲಾಗುತ್ತದೆ.